Indian Railways News => Topic started by AllIsWell on Jul 08, 2012 - 18:00:08 PM


Title - ಕುಡಚಿ-ಬಾಗಲಕೋಟ ರೈಲ್ವೆ ಮಾರ್ಗಕ್ಕೆ ಹಣ ಬಿಡುಗಡೆ ವಿಕ ಸುದ್ದಿಲೋಕ | Jul 7, 2012, 01.04AM IST
Posted by : AllIsWell on Jul 08, 2012 - 18:00:08 PM

ಬಾಗಲಕೋಟ:ಬಾಗಲಕೋಟ, ಬೆಳಗಾವಿ ಜಿಲ್ಲೆಗಳ ಜನರ ಬಹುದಿನದ ಬೇಡಿಕೆಗೆ ರಾಜ್ಯ ಸರಕಾರ ಮನ್ನಣೆ ನೀಡಿದೆ. ರಾಜ್ಯದಿಂದ ಯೋಜನೆಗೆ ಅಗತ್ಯ ಹಣ ಭರಿಸಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಇದರೊಂದಿಗೆ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವ ಚಿಂತನೆ ಕಾರ್ಯರೂಪಕ್ಕೆ ಬರಲಿದೆ.

ಯೋಜನೆ ಅನುಷ್ಠಾನಕ್ಕಾಗಿ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಗೆ ಇದ್ದ ಅಡ್ಡಿಯೂ ದೂರಾಗಿದೆ. ರೈತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸರಕಾರ ಈಗಾಗಲೇ ಪ್ರತಿ ಎಕರೆ ಒಣ ಭೂಮಿಗೆ 6 ಲಕ್ಷ ರೂ., ನೀರಾವರಿ ಜಮೀನಿಗೆ 12 ಲಕ್ಷ ರೂ. ಪರಿಹಾರ ನೀಡಲು ಆದೇಶ ಹೊರಡಿಸಿದೆ. ಈ ಆದೇಶದೊಂದಿಗೆ 408 ಕೋಟಿ ರೂ.ಗಳನ್ನು ನೀಡಲು ಅನುಮೋದನೆ ನೀಡಿರುವುದು ಈ ಭಾಗದ ಜನತೆಯಲ್ಲಿ ಹರ್ಷವನ್ನುಂಟು ಮಾಡಿದೆ.

144 ಕಿ.ಮೀ. ಉದ್ದದ ಈ ರೈಲು ಮಾರ್ಗ ನಿರ್ಮಾಣಕ್ಕೆ 816 ಕೋಟಿ ರೂ.ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.50ರಷ್ಟು ಪಾಲುದಾರಿಕೆಯಲ್ಲಿ ಯೋಜನೆ ಕೈಗೊಳ್ಳಲಾಗುತ್ತಿದ್ದು, ರಾಜ್ಯದ ಪಾಲಿನ 408 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರಕಾರ ಯೋಜನೆ ಅನುಷ್ಠಾನಕ್ಕೆ ಶೀಘ್ರವಾಗಿ ಅಗತ್ಯ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಿದೆ. ಯೋಜನೆ ಅನುಷ್ಠಾನಕ್ಕೆ ಕೇಂದ್ರ ರಾಜ್ಯದತ್ತ ಬೊಟ್ಟು ಮಾಡುವ ಬದಲು ಅಗತ್ಯ ಹಣ ಬಿಡುಗಡೆಗೊಳಿಸಬೇಕಿದೆ.